Thursday, July 29, 2010

ನಾನು ನನ್ನ ಮೊಬೈಲ್

ನಾನು ನನ್ನ ಅಚ್ಚು ಮೆಚ್ಚಿನ ಮೊಬೈಲ್ ಜೊತೆ ಕಳೆದ ಕೆಲವು ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನವೇ ಲೇಖನ..



ನನಗೆ ಕೆಲಸ ಸಿಕ್ಕಿ 6 ತಿಂಗಳ ಮೇಲಾಗಿತ್ತು.. ಇನ್ನೂ ನನ್ನ ಮೊಬೈಲ್ ಚೇಂಜ್ ಮಾಡಿಲ್ಲ ಅನ್ನೋ ಕೊರತೆ ನನ್ನ ಕಾಡ್ತಾ ಇತ್ತು. ಅದಕ್ಕೆ ಸರಿಯಾಗಿ ಯುನಿವೆರ್ಸೆಲ್ ನಲ್ಲಿ ಹಬ್ಬದ ಪ್ರಯುಕ್ತ ರಿಯಾಯಿತಿ ಹಾಕಿದ್ದರು, ತಡಮಾಡದೆ ಹೋಗಿ ಆಗ ಬಹಳ ಚಾಲ್ತಿಯಲ್ಲಿದ್ದ Sony Ericson W810i ಮೊಬೈಲ್ ಖರೀದಿಸಿದೆ.
ಮೊಬೈಲ್ ತಗೊಂಡ ಖುಷಿಯಲ್ಲಿ ಅಪ್ಪನಿಗೆ ಕಾಲ್ ಮಾಡಿ ಮೊಬೈಲ್ ತಗೊಂಡ ವಿಷ್ಯ ತಿಳಿಸಿದೆ. ಅವ್ರು ಏನು ಮೊಬೈಲ್ ಆದ್ರೂ ಸ್ವಲ್ಪ ವರ್ಷ ಬರುತ್ತಾ  ಅಂತ ಕೇಳಿದ್ರು .ನಂಗೆ ವಸ್ತುಗಳನ್ನ ಸರಿಯಾಗಿ ಇಟ್ಟುಕೊಳ್ಳುವುದಕ್ಕೆ  ಬರೋಲ್ಲ ಅನ್ನೋ ಸತ್ಯನ ಕೆದಕಿ ಕಿಚಾಯಿಸ್ತಿದ್ರು .. ನಾನೂ ಜೋಶ್ನಲ್ಲಿ 5 ವರ್ಷ ಗ್ಯಾರೆಂಟಿ ಅಂದೆ .
ಇದಾದ ನಂತರದ ವಾರಾಂತ್ಯದಲ್ಲಿ ಬೆಂಗಳೂರಿನಿಂದ  ರಾಜಹಂಸ ಬಸ್ ನಲ್ಲಿ ಕುಳಿತು ಊರಿಗೆ ಹೊರಟೆ . ಬಸ್ ಮಜೆಸ್ಟಿಕ್ ಹತ್ರ ಸಿಗ್ನಲ್ ನಲ್ಲಿ ನಿಂತಿತ್ತು , ನಾನು ಮೊಬೈಲಿನಲ್ಲಿ FM ಕೇಳ್ತಾ ಕೂತಿದ್ದೆ . ಆಕಸ್ಮಿಕವಾಗಿ ಒಂದು ಕೈ ಹೊರಗಿಂದ ಬಂದು ನನ್ನಿ ಕೈಲಿದ್ದ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನ ನಡಿಸ್ತು ನನ್ನ ಅದೃಷ್ಟಕ್ಕೆ  ನಾನು ಮೊಬೈಲ್ ಗಟ್ಟಿ ಹಿಡಿದುಕೊಂಡಿದ್ದರಿಂದ ಕಸಿದು ಕೊಳ್ಳಲಿಕ್ಕೆ  ಆಗಿಲ್ಲ . ತಕ್ಷಣ ಕಿಟಕಿ ಹೊರಗೆ ತಲೆ ಹಾಕಿ ಕೈ ಹಾಕಿದ ಮನುಷ್ಯನಿಗಾಗಿ ಹುಡುಕಾಟ  ನಡೆಸಿದೆ . ಅವನಾಗಲೇ ಪರಾರಿಯಾಗಿ ಆಗಿತ್ತು .ಸಧ್ಯ ಮೊಬೈಲ್ ಅವನ ಕೈಗೆ ಸಿಗಲಿಲ್ಲ ಅಂತ ಸಮಾಧಾನ ಮಾಡ್ಕೊಂಡು ಕಿಟಕಿ ಬಾಗಿಲು ಹಾಕಿ ಸೀಟ್ಗೆ ತಲೆ ಆನಿಸಿದೆ.
ಇನ್ನೊಂದು ದಿನ ಮಳೆಗಾಲದಲ್ಲಿ ಆಫೀಸಿನಿಂದ ಬರುವಾಗ ಜೋರಾಗಿ ಮಳೆ ಶುರುವಾಯ್ತು . ನನಗೋ ಮಳೆಯಲ್ಲಿ ಬೈಕ್
  ಓಡಿಸುವ ಚಟ . ಮೊಬೈಲ್ ಜೇಬ್ನಲ್ಲಿ ಇದೆ ಅನ್ನೋದನ್ನ ಮರೆತು ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಹೋದೆ . ಮನೆಗೆ  
ಹೋದಮೇಲೆ ನೋಡಿದರೆ ಮೊಬೈಲ್  ಸತ್ತು ಹೋಗಿದೆಸ್ವಿಚ್ ಆನ್ ಆಗ್ತಾನೆ ಇಲ್ಲ .. ನನ್ನ ನಾನೇ ಬೈದುಕೊಂಡು ಮೊಬೈಲ್ ಬ್ಯಾಟರಿ ತೆಗೆದು ಅಕ್ಕಿಯಲ್ಲಿ ಇಟ್ಟೆ . ಗಂಟೆಗೊಮ್ಮೆ ಅದನ್ನ ತೆಗೆದು ಮೊಬೈಲ್ ಗೆ  ಹಾಕಿ ಚೆಕ್ ಮಾಡ್ತಾ ಇದ್ದೆ . ಏನು ಉಪಯೋಗ ಆಗಿಲ್ಲ .. ಅಂದು ಅದೇ ಬೇಜಾರಿನಲ್ಲಿ ಮಲಗಿದೆ . ಮಾರನೇ ದಿನ ಬೆಳಿಗ್ಗೆ ಎದ್ದು ಮತ್ತೊಮ್ಮೆ ಚೆಕ್ ಮಾಡಿದೆ ಮೊಬೈಲ್ ಸ್ವಿಚ್ ಆನ್  ಆಗಿಬಿಟ್ಟಿತು !!.. ಎಲ್ಲಾ ವರ್ಕ್ ಆಗ್ತಾ ಇದೆಯಾ ಅಂತ ಪರೀಕ್ಷಿಸಿದೆ.ಎಲ್ಲವೂ ವರ್ಕ್ ಆಗ್ತಾ ಇದೆ !!!. ನನಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ . ಅಕ್ಕಿಯಲ್ಲಿ ಇಡೋ  ಐಡಿಯಾ ಕೊಟ್ಟ ಯಾರೋ ಪುಣ್ಯಾತ್ಮನಿಗೆ ಮನಸ್ಸಿನಲ್ಲಿಯೀ ಧನ್ಯವಾದ ಸಮರ್ಪಿಸಿದೆ . ಮೊದಲನೇ ಬಾರಿಗೆ ಫಾರ್ವರ್ಡ್ಡೆಡ್ ಮೇಲ್ ನನ್ನ ಉಪಯೋಗಕ್ಕೆ ಬಂದಿತ್ತು ..
ಮತ್ತೊಂದು ದಿನ ಸಂಜೆ ನಾನು ನನ್ನ ರೂಮ್ನಲ್ಲಿ ಟಿವಿ ನೋಡುತ್ತಾ ಕುಳಿತಿದ್ದೆ ನನ್ನ ತಮ್ಮ ಬಸ್ ನಿಲ್ದಾಣದಲ್ಲಿ  ಇದ್ದೇನೆ ನನ್ನ ಕರೆದುಕೊಂಡು ಹೋಗಲು ಬಾ ಅಂತ ಫೋನ್ ಮಾಡಿದ . ಮೊಬೈಲನ್ನು ಜೇಬಿಗೆ ತುರುಕಿಕೊಂಡು ಬೈಕ್ ನಲ್ಲಿ ಹೊರಟೆ . ಅವನನ್ನು ಕರೆದು ಕೊಂಡು ಬಂದು ಮನೆಯ ಮೆಟ್ಟಿಲೇರುವಾಗ ನನ್ನ ಜೇಬು ನೋಡಿಕೊಂಡೆ ಮೊಬೈಲ್ ಇಲ್ಲ ???.. ಮನೆಯಲ್ಲೇ ಇಟ್ಟಿದ್ದೇನೆ ಅಂದುಕೊಂಡು ಮನೆಯ ಒಳಗೆ ಹುಡುಕಾಡಿದೆ ಮೊಬೈಲ್ ಸಿಗ್ಲಿಲ್ಲ ... ತಮ್ಮನ ಮೊಬೈಲ್ ನಿಂದ ನನ್ನ ಮೊಬೈಲ್ ಗೆ ಕಾಲ್ ಮಾಡಿದೆ ರಿಂಗ್ ಆಗ್ತಾ ಇದೆ ಆದ್ರೆ ಫೋನ್ ಮನೇಲಿ  ಇಲ್ಲ .. ತಕ್ಷಣ   ಹೊಡುಕಿಕೊಂಡು  ಹೊರಟೆ  ಮನೆಯಿಂದ  ಸ್ವಲ್ಪ  ದೂರದಲ್ಲಿ  ರಸ್ತೆಯ  ಮಧ್ಯದಲ್ಲಿ  ಬೀದಿ  ದೀಪದ  ಕೆಳಗಡೆ  ನನ್ನ  ನಲುಮೆಯ  ಮೊಬೈಲ್  ಬಿದ್ದುಕೊಂಡಿತ್ತು .. !!! . ಅದು ಸ್ವಲ್ಪ ಬ್ಯುಸಿ ರೋಡ್ ವಾಹನಗಳ ಓಡಾಟ ತುಂಬಾ ಜಾಸ್ತಿ ಇಲ್ಲದಿದ್ದರೂ ಓಡಾಡುವವರು ಬಹಳ ಜನ . ಅಂತಹ ರೋಡ್ನ ಮಧ್ಯದಲ್ಲಿ ಸರಿ ಸುಮಾರು 20   ನಿಮಿಷಗಳ ವರೆಗೆ  ,ಬೀದಿದೀಪದ   ಕೆಳಗೆ  ಯಾವ  ವಾಹನದ  ಅಡಿಗೂ  ಆಗದೆ , ಯಾರ  ಕಣ್ಣಿಗೂ  ಬೀಳದೆ   ನನ್ನ  ಚಿನ್ನ   ಬಿದ್ದುಕೊಂಡಿತ್ತು .ನನ್ನ  ಅದೃಷ್ಟಕ್ಕೆ  ನಾನೇ  ಖುಷಿ ಪಟ್ಟುಕೊಂಡು   ಮನೆ  ಸೇರಿದೆ .
ಇನ್ನೊಮ್ಮೆ  ಮೆಕೆದಾಟುವಿಗೆ  ಟ್ರಿಪ್  ಗೆ  ನಾವು  ಗೆಳೆಯರೆಲ್ಲ  ಸೇರಿ  ಹೋಗಿದ್ದೆವು . ಅಲ್ಲಿ  ಫೋಟೋ  ತೆಗಿ  ಅಂತ   ವೇಣು  ಅವನ  ಮೊಬೈಲ್  ಕೊಟ್ಟ . ನಾನು  ಅವನ  ಫೋಟೋ  ತೆಗೆಯೋ  ಭರದಲ್ಲಿ  ನನ್ನ  ಜೇಬಿನಲ್ಲಿದ್ದ  ಮೊಬೈಲ್  ಮರೆತು  ನೀರಿಗೆ  ಧುಮುಕಿದೆ (ಬುದ್ದಿವಂತ ಮಹಾಶಯ ). 2 ನಿಮಿಷದ  ನಂತರ  ನನಗೆ  ಜ್ಞಾನೋದಯವಾಯ್ತು ಅಷ್ಟರಲ್ಲಾಗಲೇ   ನನ್ನ  ಮೊಬೈಲ್  ನೀರು  ಕೊಡಿದು  ಕೆಲಸ  ಮಾಡುವುದನ್ನು  ನಿಲ್ಲಿಸಿಯಾಗಿತ್ತು . ಮೊದಲೊಂದು  ಬಾರಿ  ಅನುಭವ  ಇದ್ದುದರಿಂದ  ಮೊದಲಿನಷ್ಟು   ಗಾಬರಿ  ಆಗಲಿಲ್ಲ . ಮನೆಗೆ  ಬಂದವನೇ  ಮತ್ತೊಮ್ಮೆ  ಅಕ್ಕಿಯ  ಮೊರೆ  ಹೋದೆ . ಮಾರನೆ  ದಿನ  ಬ್ಯಾಟರಿ  ಯನ್ನು  ಮೊಬೈಲ್  ಗೆ  ಹಾಕಿ  ಸ್ವಿಚ್  ಆನ್  ಮಾಡಿದೆ . ಸ್ವಿಚ್  ಆನ್  ಕೂಡ ಆಯ್ತು . ಅಕ್ಕಿಗೊಂದು  ಧನ್ಯವಾದ  ಅರ್ಪಿಸಿ  ಕಾಲ್  ಮಾಡಲು  ಟ್ರೈ  ಮಾಡಿದೆ . ಅಷ್ಟರಲ್ಲಿ ಮತ್ತೊಮ್ಮೆ  ಸ್ವಿಚ್  ಆಫ್   ಆಯ್ತು . ಮತ್ತೆ  ಆನ್  ಆಗಲೇ  ಇಲ್ಲ . ಇನ್ನೊಮ್ಮೆ  ಅಕ್ಕಿಯ  ಮೊರೆ  ಹೋದೆ  ಏನೂ  ಪ್ರಯೋಜನ  ವಾಗಲಿಲ್ಲ .ಗತಿ  ಇಲ್ಲದೆ  ಸರ್ವಿಸ್  ಸೆಂಟರ್  ಗೆ  ಕೊಟ್ಟೆ . ಅವನು  ಬ್ಯಾಟೆರಿ   ತೆಗೆದು  ಕೊಡುತ್ತ  ಸಾರ್ , ಮೊಬೈಲ್  ಗೆ  ನೀರು  ಹೋಗಿದೆ  ಹಾಗಾಗಿ  ವಾರೆನ್ಟಿ  ಏನೂ  ಬರುವುದಿಲ್ಲ  ಅಂದ . ರಿಪೈರ್   ಆಗುವ  ಸಾಧ್ಯತೆ  ಕೂಡ  50%  ಅಂದ . ನಾನಗೆ  ಫುಲ್  ಬೇಜಾರಾಗಿ  ಆದಿನ  ಕೆಲಸ  ಮಾಡಲು   ಸಾಧ್ಯ  ಆಗದೆ  ½ ದಿನ  ರಾಜ   ಹಾಕಿ  ಮನೆಗೆ  ಬಂದು  ನಿದ್ದೆ  ಮಾಡಿದೆ . ಮಾರನೆ  ದಿನ  ನಾನು  ಜಾತಕ ಪಕ್ಷಿಯಂತೆ   ಸರ್ವಿಸ್  ಸೆಂಟರ್  ನವನ  ಕಾಲ್ ಗೆ    ಕಾಯುತ್ತ  ಇದ್ದೆ , ಅಂತು  ಅವನ  ಫೋನ್  ಬಂತು .ಸಾರ್ , circuit   ಸುಟ್ಟು  ಹೋಗಿದೆ , IC  ಬರ್ನ್   ಆಗಿದೆ  ಅಂತೆಲ್ಲ  ಹೇಳಿ  ಕೊನೆಗೆ ರಿಪೈರ್    ಗೆ  2500/- ಆಗುತ್ತೆ  ಅಂದ .  ಹೋಸ್ಪಿಟಲ್  ಬಿಲ್  ಜಾಸ್ತಿ  ಅಂತ  ರೋಗಿಯನ್ನು  ಸಾಯಕ್ಕೆ  ಬಿಡಕ್ಕಗುತ್ಯೆ?. ನಾನೂ  ನನ್ನ  ಮೊಬೈಲ್ ನ್ನು  ಬದುಕಿಸಲು  ಪಣತೊಟ್ಟು  , ಸರ್ವಿಸ್  ಸೆಂಟರ್ ನವನಿಗೆ   ರಿಪೈರ್   ಮಾಡು  ಅಂದೆ . ನಂತರದ  2 ದಿನ  ಅವನ  ಫೋನ್  ಬರಲೇ  ಇಲ್ಲ . ಪಾರ್ಟ್ಸ್  ಸ್ಟಾಕ್  ಇಲ್ಲ.ಸರ್ವಿಸ್ ಬಾಯ್ ರಜ   ಅಂತೆಲ್ಲ  ಹೇಳಿ  ಒಂದು  ವಾರ  ಸತಾಯಿಸಿದ  ನಂತರ  ಒಂದು  ಒಳ್ಳೆಯ  ದಿನ  ಕಾಲ್  ಮಾಡಿ  ನಿಮ್ಮ  ಮೊಬೈಲ್  ರಿಪೈರ್     ಆಗಿದೆ  ಅಂದ .ಅಂತು ಬದುಕಿದೆಯ ನನ್ನ ಗೆಳೆಯ ಅಂದುಕೊಂಡು ಆದಿನ   ಮಧ್ಯಾನ್ನವೆ    ಸರ್ವಿಸ್  ಸೆಂಟರ್ಗೆ  ಓಡಿದೆ . ಅಲ್ಲಿ  ಅವನು  ನನಗೆ ಮೊಬೈಲ್ ವರ್ಕ್ ಆಗ್ತಾ ಇದೆ ಅಂತ ತೋರಿಸಲು ಬ್ಯಾಟರಿ ಹಾಕಿದ. ಮೊಬೈಲ್ ಆನ್ ಆಗಲೇ ಇಲ್ಲ. ನಾನು ಗಾಬರಿ , ಅವನೂ ಕೂಡ . ಅವನೆಷ್ಟೇ  ಪ್ರಯತ್ನ ಮಾಡಿದರು ಮೊಬೈಲ್ ಮಾತ್ರ ಮಾತನಾಡಲೇ ಇಲ್ಲ. ಅವನೂ ಕೈ ಚೆಲ್ಲಿದ. ನನ್ನ  ಸಂತೋಷ  ಸಂಭ್ರಮ  ಎಲ್ಲ  ಟುಸ್ ಪಟಾಕಿ ಆಗಿ ಹೋಯ್ತು. ಸ್ವಲ್ಪ    ಹೊತ್ತು  ಅವರೊಡನೆ  ಜಗಳ  ಆಡಿದೆ . ಏನು  ಉಪಯೋಗ  ಆಗಲಿಲ್ಲ . ಹಾಳಾದ  ನನ್ನ  ಮೊಬೈಲ್ ನ್ನು   ತೆಗೆದುಕೊಂಡು  ಮನೆಗೆ  ಹೋದೆ . ಇಷ್ಟಪಟ್ಟು    ತೆಗೆದುಕೊಂಡ  ಮೊಬೈಲ್  ವರ್ಷ  ಕಳೆಯೋದರ  ಒಳಗೆ  ಪ್ರಾಣ ಬಿಟ್ಟಿತ್ತು  .ಅಪ್ಪನ ವಾಕ್ಯ ನನ್ನ ಹಂಗಿಸುತ್ತ ಇತ್ತು.
ಅದೇ  ಬೇಜಾರಿನಲ್ಲಿ  ಮೊಬೈಲ್ ಗೆ   ಅದರ  ಬ್ಯಾಟರಿ  ಹಾಕಿ  ಸ್ವಿಚ್  ಆನ್  ಮಾಡಲು  ಪ್ರಯತ್ನಿಸಿದೆ . ಸ್ವಿಚ್ ಆನ್    ಆಗಿಬಿಟ್ಟಿತು .. !!!!!!! ತಕ್ಷಣ  ನಾನು  ಕಾಲ್  ಮಾಡಲು  ಪ್ರಯತ್ನಿಸಿದೆ . ಮನೆ  ಲ್ಯಾಂಡ್ ಲೈನ್   ನಿಂದ  ನನ್ನ  ಮೊಬೈಲ್ ಗೆ   ಕಾಲ್  ಮಾಡಿದೆ  .. ಎಲ್ಲವೂ  ವರ್ಕ್  ಆಗ್ತಾ  ಇದೆ …(ಸರ್ವಿಸ್ ಸೆಂಟರ್ ನವನು ಆನ್ ಮಾಡಿದಾಗ ಯಾಕೆ ಆಗಲಿಲ್ಲ ಅನ್ನುವುದು ನನಗಿನ್ನೂ ಯಕ್ಷ  ಪ್ರಶ್ನೆ.ನನಗದರ ಉತ್ತರ ಬೇಕಾಗಿಲ್ಲ ಅನ್ನಿ.ನನ್ನ ಅನಿಸಿಕೆ ಪ್ರಕಾರ ಅವನ ಬ್ಯಾಟರಿ ಯಲ್ಲೇ  ಚಾರ್ಜ್ ಇರಲಿಲ್ಲ ಅನ್ಸುತ್ತೆ.. :) ) ನನಗಾದ  ಸಂತೋಷಕ್ಕೆ  ಏನೂ  ಮಾಡಬೇಕೋ  ಗೊತ್ತಾಗಿಲ್ಲ .. ರೂಮ್ನಲ್ಲೇ  ಕುಣಿದಾಡಿದೆ  ..ಸರ್ವಿಸ್  ಸೆಂಟರ್ ನವನು   ಪುಕ್ಕಟೆಯಾಗಿ  ನನಗೆ  ನನ್ನ  ಮೊಬೈಲ್  ರಿಪೈರ್   ಮಾಡಿಕೊಟ್ಟಿದ್ದ . ಇನ್ನೊಂದು  ಸಲ  ಎಲ್ಲವೂ  ವರ್ಕ್  ಆಗ್ತಾ  ಇದೆಯಾ  ಅಂತ  ಪರೀಕ್ಷೆ    ಮಾಡಿದೆ , ಮೆಮೊರಿ  ಕಾರ್ಡ್  ರೀಡ್   ಆಗ್ತಾ  ಇರಲಿಲ್ಲ  ಅದನ್ನು  ತೆಗೆದುಕೊಂಡು  ಇನ್ನೊಂದು  ಸರ್ವಿಸ್  ಸೆಂಟರ್ಗೆ  ಹೋದೆ( ಮನುಷ್ಯನ ಅತಿ ಆಸೆ ನೋಡಿ)   ಅವನೂ  ಸಾರ್  ಇದು  ವರ್ಕ್  ಆಗ್ತಿರೋದೆ   ಗ್ರೇಟ್ . . ಇದನ್ನು  ರಿಪೈರ್    ಮಾಡಕ್ಕಾಗೋಲ್ಲ  ಅಂದು  ಬಿಟ್ಟ .
ಆದರೆ  ಅದೇ  ಕೊನೆ , ಅದಾದಮೇಲೆ ಇನ್ನು  ವರೆಗೂ  ನನ್ನ  ಮೊಬೈಲ್  ನನಗೆ  ಬೇರಾವ  ತೊಂದರೆಯನ್ನು  ಕೊಟ್ಟಿಲ್ಲ .ಈ  ನನ್ನ  ಮೊಬೈಲ್  ಮುಂದಿನ ತಿಂಗಳು ೪ ನೆ  ವರ್ಷಕ್ಕೆ  ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನನ್ನ ಎಲ್ಲ ಸಂಭಾಷಣೆಗೆ  ಸಾಕ್ಷಿ ಆದ ಮೊಬೈಲ್ ಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

Friday, October 30, 2009

ನಾಗಮಲೈ - ಒಂದು ಪ್ರವಾಸ ಕಥನ

ಕಳೆದ ಹಲವು ದಿನಗಳಿಂದ ಎಲ್ಲಿಗೂ ಪ್ರವಾಸಕ್ಕೆ ಹೋಗದೆ ಮನಸ್ಸು ಬೇಜಾರಿನಲ್ಲಿತ್ತು .ಅದಕ್ಕೆ ಸರಿಯಾಗಿ ಪ್ರವೀಣ "ಅಣ್ಣ ನಾಗಮಲೆಗೆ ಹೋಗಿ ಬರೋಣ ಬರ್ತೀಯ ?" ಅಂದ .ಸರಿ ಅಂತ ಹೊರಟೆ .

ಶನಿವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ನಾನು , ಪ್ರವೀಣ್ ಹಾಗು ಅವನ 3 ಗೆಳೆಯರು (ಮಹೇಶ್ ,ಸುನಿಲ್ ,ಸಂತೋಷ್ ) ಸೇರಿ ಮಲೆಯ ಮಹದೇಶ್ವರ ಬೆಟ್ಟಕ್ಕೆ ಹೋಗಲು ಮೆಜೆಸ್ಟಿಕ್ ನಿಂದ ಮೈಸೂರು ಬಸ್ಸು ಏರಿದೆವು . ಬಸ್ಸಿನಲ್ಲಿ ಸೀಟುಗಳು ಖಾಲಿ ಇದ್ದವು . ಯಾವ ಕಡೆ ಬಿಸಿಲು ಬೀಳುತ್ತದೆ ಅಂತ ಲೆಕ್ಕಾಚಾರ ಹಾಕಿ, ಬಲಗಡೆ ಬೀಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ನಾನು ಪ್ರವೀಣ ಆ ಕಡೆಯ ಸೀಟಿನಲ್ಲಿ ಕುಳಿತೆವು .ಉಳಿದವರು ನಮ್ಮ ಮುಂದಿನ ಸೀಟಿನಲ್ಲಿ ಕುಳಿತರು . ಇನ್ನೊಂದೆಡೆ ಕಂಡಕ್ಟರ್ ಶನಿವಾರವೂ ಬಸ್ ಖಾಲಿ ಇದೆಯಲ್ಲ ಅಂತ ಬೈಕೊಳ್ತಾ ಇದ್ದ . ಇನ್ನು ಡ್ರೈವರ್ ಸಾಹೇಬರು ನಿಧಾನವೇ ಪ್ರಧಾನ ಅನ್ನೋದನ್ನ ಅಕ್ಷರಶಃ ಪಾಲಿಸುತ್ತಾ ಇದ್ರು .

ಅಂತು ಇಂತೂ 1 ಗಂಟೆಯ ನಂತರ ಬಸ್ ಬೆಂಗಳೂರನ್ನು ದಾಟಿ ಮೈಸೂರ್ ರೋಡ್ ಗೆ ಬಂದು ಸೇರಿತು . ಆಗ ತಿಳೀತು ನಾವು ಕುಳಿತ ಕಡೆಯೇ ಬಿಸಿಲಿನ ಝಳ ಬೀಳುತ್ತಿದೆ ಅಂತ.ಇನ್ನೊಂದೆಡೆ ಕೂರೋಣವೆಂದರೆ ಅಷ್ಟರಲ್ಲಾಗಲೇ ಉಳಿದ ಸೀಟುಗಳು ತುಂಬಿತ್ತು ಹಾಗಾಗಿ ನಾವು ಬೇರೆ ಗತಿ ಇಲ್ಲದೆ ಅಲ್ಲೇ ಕುಳಿತೆವು.

ಬಸ್ಸು ಚೆನ್ನರಾಯಪಟ್ಟಣದಲ್ಲಿ ಹತ್ತು ನಿಮಿಷ ಕಾಫಿಗಾಗಿ ನಿಂತಿತು. ನಾವೆಲ್ಲ ಟೀ ಕುಡಿಯಲು ಕೆಳಗಿಳಿದೆವು . ಟೀ ಕುಡಿದು ಮರಳಿ ಬಂದಾಗ ಪ್ರವೀಣನ ಗೆಳೆಯರು ಕುಳಿತಿದ್ದ ಸೀಟ್ನಲ್ಲಿ 3 ಜನ ಮಹಿಳೆಯರು ಕುಳಿತಿದ್ದರು . ಮಹೇಶ ಮೊದಲು ಗಲಿಬಿಲಿಗೊಂದರೂ ಧೈರ್ಯ ತಂದುಕೊಂಡು "ಇದು ನಮ್ಮ ಸೀಟು" ಅಂದ. ಅವರಿಂದ ನೋ ರೆಸ್ಪಾನ್ಸ್ . ಅವರೂ ಅವನಷ್ಟೇ ಗಾಬರಿಗೊಂಡವರಂತೆ ಕಂಡು ಬಂತು. ಅದಕ್ಕೆ ಸರಿಯಾಗಿ ಕಂಡಕ್ಟರ್ "ಬೇರೆ ಎಲ್ಲಾದರೂ ಕೂತ್ಕೋಳಿ ಸಾರ್" ಅಂದ.ಮಹೇಶ,ಸುನಿಲ,ಸಂತೋಷ ಮುಖ ಮುಖ ನೋಡ್ಕೊಂಡು ಒಂದೊಂದು ಕಡೆ ಕುಳಿತರು.ಬಸ್ಸು ಹೊರಟಿತು, ಸಡನ್ ಆಗಿ ಆ ಮೂರು ಮಹಿಳೆಯರು "ಬಸ್ಸು ನಿಲ್ಲಿಸಿ ,ನಾವು ಬೆಂಗಳೂರಿಗೆ ಹೋಗೋ ಬಸ್ಸು ಅಂದುಕೊಂಡು ಹತ್ತಿದ್ವಿ" ಅಂತ ಹೇಳಿ ಇಳಿದು ಹೋದರು.ಮರಳಿ ಸೀಟು ಸಿಕ್ಕಿದಕ್ಕೆ ಸಂತೋಷನಿಗೆ ಹಾಲು ಕುಡಿದಷ್ಟು ಸಂತೋಷ. ಕಂಡಕ್ಟರ್ ಮಾತ್ರ "ಒಬ್ಬರು ಟಿಕೆಟ್ ತೆಗೆದುಕೊಂಡಿಲ್ಲ ದಯವಿಟ್ಟು ತಗೊಳ್ಳಿ" ಅಂತ ಕೂಗ್ತಾ ಇದ್ದ . ಯಾರೂ ಬಗ್ಗದಿದ್ದಾಗ ಟಿಕೆಟ್ ಚೆಕ್ ಮಾಡಲು ಪ್ರಾರಂಬಿಸಿದ. ನಮ್ಮ ಹಿಂದಿನ ಸೀಟ್ ನಲ್ಲಿದ್ದ ಪ್ರಯಾಣಿಕ ಕೊಟ್ಟ ಟಿಕೆಟ್ ನೋಡಿ ಕಂಡಕ್ಟರ್ "ರೀ ಇದು ನಮ್ಮ ಬಸ್ ನ ಟಿಕೆಟ್ ಅಲ್ಲ" ಅಂದ. ಆ ಮನುಷ್ಯ ಪಕ್ಕದ ಬಸ್ ಏರುವುದರ ಬದಲು ನಮ್ಮ ಬಸ್ ಏರಿದ್ದ.ಆ ಬಸ್ ಆಗಲೇ ಹೊರಟು ಹೋಗಗಿತ್ತು.ಪ್ರಯಾಣಿಕ ಪಾಪ ಪಾಂಡುವಿನ ಗಾಬರಿ ಗೋಪಾಲಯ್ಯ ಆಗಿದ್ದ. ಕಂಡಕ್ಟರ್ "ಟಿಕೆಟ್ ತಗೊಳ್ಳಿ,ಟಿಕೆಟ್ ತಗೊಳ್ಳಿ" ಅಂದ.ಅದಕ್ಕೆ ಪ್ರಯಾಣಿಕ "ನನ್ನ ಹತ್ರ ಮೈಸೂರಿನ ಟಿಕೆಟ್ ಇದೆಯಲ್ಲ? ಎರಡೂ ಗೋರ್ಮೆಂಟ್ ಬಸ್ ತಾನೆ? ಬಯ್ ಮಿಸ್ಟೇಕ್ ಈ ಬಸ್ ಹತ್ತಿದೆ" ಅಂದ.ಅದಕ್ಕೆ ಕಂಡಕ್ಟರ್ "ಸ್ವಾಮಿ, ನಿಮ್ಮ ಮನೆ ಅಂತ ಬಯ್ ಮಿಸ್ಟೇಕ್ ನಿಮ್ಮ ಪಕ್ಕದ ಮನೆಗೆ ಹೋಗಕಾಗುತ್ತಾ? ಹಾಗೆ ಇದೂನು ಕೂಡ. ಮೈಸೂರ್ ಗೆ ಟಿಕೆಟ್ ನಿನ್ನೇದು ಸಿಗುತ್ತೆ, ಈ ಟಿಕೆಟ್ ನಡೆಯೋಲ್ಲ ಬೇರೆ ತಗೊಳ್ಳಿ" ಅಂದ.ಆದ್ರೆ ಪ್ರಯಾಣಿಕ ಮಾತ್ರ ಇನ್ನೂ ಟಿಕೆಟ್ ಕೈಲಿ ಹಿಡ್ಕೊಂಡು ಯೋಚನೆ ಮಾಡ್ತಾ ಇದ್ದ. ಅದನ್ನು ಕಂಡು ಕಂಡಕ್ಟರ್ "ಸ್ವಾಮಿ ಅ ಟಿಕೆಟ್ ಸತ್ತು ಹೋಗಿದೆ, ಜೀವ ಇಲ್ಲ, ಬೇರೆ ತಗೊಳ್ಳಿ" ಅಂದ.ಕೊನೆಗೂ ಪ್ರಯಾಣಿಕ ಗತಿ ಇಲ್ಲದೆ ಬೇರೆ ಟಿಕೆಟ್ ಖರೀದಿಸಿದ.

ಸಂಜೆ ೬ ಗಂಟೆ ಸುಮಾರಿಗೆ ನಮ್ಮ ಬಸ್ ಮೈಸೂರ್ ತಲುಪಿತು. ಅಲ್ಲಿ ನಮ್ಮ ಜೊತೆ ಸುಬ್ಬು(ಸುಬ್ರಮಣ್ಯ) ಸೇರಿಕೊಂಡ. ಒಂದು ಕಪ್ ಟೀ ಕುಡಿದ ನಂತರ ಸುಬ್ಬುವಿನ ಜೀಪ್ ನಲ್ಲಿ ನಾವು ಬೆಟ್ಟದ ಕಡೆ ಹೊರಟೆವು. ಜೀಪ್ ನ ಸೌಂಡ್ ಸಿಸ್ಟಂ ಸೂಪರಾಗಿತ್ತು. ನಾವು ದೊಡ್ಡದಾಗಿ ಹಾಡನ್ನು ಹಾಕಿಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಗಾಡಿ ಚಲಾಯಿಸಿದೆವು. ಕೊಳ್ಳೆಗಾಲದ ರಸ್ತೆಯ ಗತಿ ಮಾತ್ರ ಬಹಳ ಕೇವಲವಾಗಿತ್ತು. ಹೊಸ ರಸ್ತೆ ಮಾಡುವ ಸಲುವಾಗಿ ಇದ್ದ ರಸ್ತೆಯನ್ನೂ ಅಗೆಡಿಟ್ಟಿದ್ದರು. ಅಂತು 8:30 ರ ಸುಮಾರಿಗೆ ನಾವು ಕೊಳ್ಳೇಗಾಲ ತಲುಪಿದೆವು.ಅಲ್ಲಿ ಅನ್ನಪೂರ್ಣ ಹೋಟೆಲ್ ನಲ್ಲಿ ಪೂರ್ಣ ಊಟ ಮಾಡಿ, ಬೆಟ್ಟ ಹತ್ತುವಾಗ ತಿನ್ನಲು ಬೇಕಾಗುವ ಹಣ್ಣು,ಬ್ರೆಡ್ ಗಳನ್ನು ತೆಗೆದುಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಹೊರಟೆವು .ಅಷ್ಟರಲ್ಲಾಗಲೇ ಸುಬ್ಬು ಮಲೆಯ ಮಹದೇಶ್ವರ ಬೆಟ್ಟದ ಒಂದು ಲಾಡ್ಜ್ ಕಾಲ್ ಮಾಡಿ ಒಂದು ಹಾಲ್ ಬುಕ್ ಮಾಡಿದ್ದ. ಕಾರ್ತಿಕ ಮಾಸದ ಸಮಯ ಆದ್ದರಿಂದ ಬಹಳ ಜನರಿರುತ್ತಾರೆ ಲಾಡ್ಜ್ ಗಳು ತುಂಬಿರುತ್ತವೆ ಉಳಿಯಲು ಜಾಗ ಇರುವುದಿಲ್ಲ ಎಂಬೆಲ್ಲ ಸುದ್ದಿಗಳು ನಮ್ಮನ್ನು ಚಾಪೆ ಹಾಗು ಬೆಡ್ ಶೀಟ್ ತರುವಂತೆ ಮಾಡಿತ್ತು.

ಅಲ್ಲಿಯವರೆಗೂ ಜೀಪ್ ಓಡಿಸುತ್ತಿದ್ದ ಪ್ರವೀಣ್ ಕೊಳ್ಳೆಗಾಲದ ಸ್ವಲ್ಪ ದೂರದ ನಂತರ ಮಹೇಶನಿಗೆ ಡ್ರೈವಿಂಗ್ ಸೀಟ್ ಒಪ್ಪಿಸಿದ. ಮಹೇಶನ ಡ್ರೈವಿಂಗ್ ನ ಮಜಾ ಅನುಭವಿಸಿಯೇ ತೀರಬೇಕು. ಡ್ರೈವಿಂಗ್ ಸೀಟ್ನಲ್ಲಿ ಕುಳಿತ ಮಹೇಶ ಮೂರನೇ ಗೇರ್ ಗಾಗಿ ಹುಡುಕಾಟ ನಡೆಸಿದ್ದು , ಗೇರ್ ಚೇಂಜ್ ಮಾಡುವ ಸಮಯದಲ್ಲೆಲ್ಲ ಜೀಪ್ ಎಣ್ಣೆ ಹೊಡೆದವರಂತೆ ಒಲಾಡುತ್ತಿದ್ದುದು ನಮ್ಮೆಲ್ಲರಿಗೆ ನಗು ತಡೆಯದಂತೆ ಮಾಡಿತ್ತು.. ಸುಮಾರು 15 ಕಿ ಮೀ ಜೀಪ್ ಓಡಿಸಿದ ಮೇಲೆ ಸುಬ್ಬು ಡ್ರೈವಿಂಗ್ ಮಾಡಲು ಕುಳಿತ.ಅಲ್ಲಿಂದ ಸ್ವಲ್ಪ ದೂರದ ಹೋಗುವಷ್ಟರಲ್ಲಿ ಆಗ ತಾನೆ ಆದ ಒಂದು ಅಪಘಾತ ಕಣ್ಣಿಗೆ ಬಿತ್ತು.ಒಂದು ಇಂಡಿಕಾ ಕಾರು ದಾರಿಯ ಬದಿಯ ಮರಕ್ಕೆ ಬಡಿದು ತಲೆಕೆಳಗಾಗಿ ಬಿದ್ದಿತ್ತು.೪ ಜನ ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದರು. ಒಬ್ಬ ಕುಳಿತುಕೊಂಡಿದ್ದ. ಆ ದೃಶ್ಯವನ್ನು ನೋಡಿ ೩ ಜನ ಸ್ಪಾಟ್ ಡೆತ್ ಅಂದುಕೊಂಡು ಜೀಪ್ ನಿಲ್ಲಿಸಿ ಅವರ ಬಳಿ ಓಡಿದೆವು. ಅದೃಷ್ಟಕ್ಕೆ ಯಾರಿಗೂ ಪ್ರಾಣ ಹಾನಿ ಆಗಿರಲಿಲ್ಲ. ಅವರಿಗೆ ನೀರು ಕುಡಿಸಿ ಮಾತನಾಡಿಸತೊಡಗಿದೆವು.ಪ್ರವೀಣ ನಮ್ಮ ಯಡಿಯೂರಪ್ಪನವರ ಕೃಪಾ ಪೋಷಿತ ಆಂಬುಲೆನ್ಸ್ (೧೦೮) ಗೆ ಕಾಲ್ ಮಾಡಿದ.ನಮಗೆ ತಡವಾಗುತ್ತಿದ್ದುದರಿಂದ ಹೊರಡೋಣ ಅಂದುಕೊಂಡರೂ , ಅವರ ಪರಿಸ್ಥಿತಿಯನ್ನು ನೋಡಿ ನಮಗೆ ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ದುರಾದೃಷ್ಟಕರ ಸಂಗತಿ ಎಂದರೆ ಅವರು ಬಿದ್ದುದ್ದನ್ನು ನೋಡಿಯೂ ಕೆಲವು ವಾಹನದವರು ನಿಲ್ಲಿಸದೆಹೋಗಿದ್ದರು. ಕಾರಿನಲ್ಲಿದ್ದ ಐವರೂ ವಿಪರೀತ ಕುಡಿದಿದ್ದರು ಅದೇ ಅಮಲಿನಲ್ಲಿ ವಾಹನ ಚಲಾಯಿಸುವಾಗ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಯಮಪುರಿಯ ಬಾಗಿಲು ತಟ್ಟಿ ಬಂದಿದ್ದರು. ನಮ್ಮ ಕರೆಗೆ ತಕ್ಷಣ ಪ್ರತಿಕ್ರಯಿಸಿದ ಅಂಬುಲೆನ್ಸ್ ನವರು ಮುಂದಿನ ೧೫ ನಿಮಿಷದೊಳಗೆ ಅಪಘಾತವಾದ ಸ್ಥಳದಲ್ಲಿದ್ದರು .ಮೊದಲು ಅಪಘಾತವಾದ ಕಾರಿನ ಜಾಗದ ಹಾಗು ಜನರ ಯಥಾವತ್ ಫೋಟೋ ತೆಗೆದುಕೊಂಡು ನಂತರ ಎಲ್ಲರಿಗು ಪ್ರಥಮ ಚಿಕಿತ್ಸೆ ಕೊಟ್ಟರು. ನಾವೂ ಇತ್ತ ಕಡೆ ಹೊರಡಲು ಅನುವಾದೆವು
ಆಗ ಅಪಘಾತಕ್ಕೊಳಗಾದ ಇಬ್ಬರು ನಮ್ಮ ಬಳಿ ಬಂದು ಕೃತಜ್ಞತಾ ಮನೋಭಾವದಿಂದ ಧನ್ಯವಾದ ಅರ್ಪಿಸಿದರು. ನಮ್ಮೆಲ್ಲರ ಮುಖದಲ್ಲಿ ಒಂದು ರೀತಿಯ ಧನ್ಯತಾ ಮನೋಭಾವ ಹೊಮ್ಮುತ್ತಿತ್ತು.ನಾವು ಹೊರಟಿದ್ದನ್ನು ಕಂಡು ಅಂಬುಲೆನ್ಸ್ ನ ಒಬ್ಬ ಸಿಬ್ಬಂದಿ "ಸಾರ್ ನಾನೇನು ಹೇಳುವುದಿಲ್ಲ , ಹ್ಯಾಪಿ ಜರ್ನಿ "ಅಂದ.ನಾವೆಲ್ಲರೂ ಆ ಗುಂಗಿನಿಂದ ಹೊರ ಬರುವಷ್ಟರಲ್ಲಿ ಎಂ ಎಂ ಹಿಲ್ಲ್ಸ್ ತಲುಪಿದ್ದೆವು.ನಾವು ಬುಕ್ ಮಾಡಿದ್ದ ಲಾಡ್ಜ್ ಹುಡುಕಿ ಮಲಗುವಾಗ ಬರೋಬ್ಬರಿ ೨ ಗಂಟೆ.

ಬೆಳಿಗ್ಗೆ ೪ ಗಂಟೆಗೆ ಅಕ್ಕ ಪಕ್ಕದ ರೂಂ ನವರ ಗಲಾಟೆಯಿಂದ ನಮಗೂ ಬೆಳಗಾಯಿತು. ಬೆಳಗಿನ ಶೌಚ ಮುಗಿಸಿ ಒಬ್ಬ ಹುಡುಗನ ಬಳಿ ನಾಗಮಲೆಗೆ ಹೋಗುವ ದಾರಿ ವಿಚಾರಿಸಿದೆವು. ಆತ "ಸಾರ್ ೨ ಕಿ ಮೀ ರೋಡ್ ಚೆನ್ನಾಗಿದೆ ಆಮೇಲೆ ರೋಡ್ ಮೋಸ " ಅಂದ. "ಜೀಪ್ ಹೋಗ್ತದೆಯಾ ?" ಅನ್ನೋ ಪ್ರಶ್ನೆಗೆ "ಜೀಪ್ ಹೋಗ್ತದೆ ಆದ್ರೆ ನಿಮ್ಮ ಜೀಪ್ ಹೋಗಲ್ಲ, ರೋಡ್ ಫುಲ್ ಮೋಸ" ಅಂದ.

ಆದರೂ ಧೈರ್ಯ ಮಾಡಿ ನಮ್ಮ ಜೀಪ್ನಲ್ಲೇ ಹೊರಟೆವು.ಮೂರ್ನಾಕು ಜನರ ಬಳಿ ಎಂ ಎಂ ಹಿಲ್ಲ್ಸ್ ನಿಂದ ನಾಗಮಲೆಯ ದೂರ ವಿಚಾರಿಸಿದೆವು. ಒಬ್ಬೊಬ್ಬರೂ ಅವರಿಗೆ ಮನಸ್ಸಿಗೆ ಬಂದಷ್ಟು ಕಿ ಮೀ ಇದೆ ಎಂದು ಹೇಳುತ್ತಿದ್ದರು. ನಾವು ಕೊನೆಗೆ ಬೇಸತ್ತು ಇನ್ನು ಕೇಳಬಾರದು ಎಂದು ತೀರ್ಮಾನಿಸಿ ಹೊರಟೆವು.

ನಾಗಮಲೆ ಒಂದು ಬೆಟ್ಟದ ಹೆಸರು. ಆ ಬೆಟ್ಟದ ಮೇಲೆ ೨ ಬಂಡೆಗಳಿವೆ , ಒಂದು ಹಾವಿನ ಹೆಡೆ ಆಕಾರದಲ್ಲಿದ್ದು ಇನ್ನೊಂದು ಲಿಂಗದಾಕಾರದಲ್ಲಿದೆ.ಶೇಷ ಲಿಂಗವನ್ನು ರಕ್ಷಣೆ ಮಾಡುತ್ತಿದ್ದಾನೆ ಎನ್ನುವ ಪ್ರತೀತ. ನಾಗಮಲೆಗೆ ಹೋಗಬೇಕಾದರೆ ೭ ಬೆಟ್ಟಗಳನ್ನು ಹತ್ತಿ ಇಳಿಯಬೇಕು. ೩ ಬೆಟ್ಟಗಳನ್ನು ಜೀಪ್ನಲ್ಲಿ ಹತ್ತಿ ಇಳಿಯ ಬಹುದು. ಇನ್ನುಳಿದ ೪ ನ್ನು ನಾವೇ ಇರಬೇಕು. ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದ ಜನರು ನಾಗಮಲೆಯವರೆಗೆ (ಸುಮಾರು ೧೨ ಕಿ ಮೀ ) ಬರಿಗಾಲಲ್ಲಿ ನಡೆದೇ ಬರುತ್ತಾರೆ.

ನಾವು ೩ ಬೆಟ್ಟವನ್ನು ಜೀಪ್ನಲ್ಲಿ ಕ್ರಮಿಸಿದೆವು. ರೋಡ್ ನಾವು ಎಣಿಸಿದ್ದಕ್ಕಿಂತ ಚೆನ್ನಾಗಿತ್ತು ಹಾಗಾಗಿ ೬:೪೫ ರ ವೇಳೆಗೆ ನಾವು ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಜೀಪ್ನಿಂದ ಇಳಿಯುತ್ತಿರುವಾಗಲೇ ಒಬ್ಬ ಸಣ್ಣ ಹುಡುಗ ಬಂದು "ಅಣ್ಣ ಕಾಸು ಕೊಡಿ" ಅಂದ.ಅವನಿಗೆ ಬರುವಾಗ ಕೊಡ್ತೀವಿ ಅಂತ ಹೇಳಿ ನಡೆಯಲು ಪ್ರಾರಂಭಿಸಿದೆವು. ಬೆಟ್ಟದ ಬುಡದಲ್ಲಿ ಸಾಲಾಗಿ ಕೆಲವು ಮನೆಗಳಿದ್ದು , ಮನೆಯವರು ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ನಾವು ಅವರ ಮನೆ ಬಳಿಗೆ ಹೋಗುತ್ತಿದ್ದಂತೆ ಅವರ ಮಕ್ಕಳು "ಅಣ್ಣ ಕಾಸ್ ಕೊಡಿ " ಅಂತ ದುಂಬಾಲು ಬೀಳುತ್ತಾರೆ. ಇನ್ನು ಕೆಲವರು "ಅಣ್ಣ ಬಿಸ್ಕುಟು ತೆಗ್ಸ್ಕೊಡಿ " ಅಂತ ಹಿಂದೆ ಬೀಳುತ್ತಾರೆ. ನಾವು ಅವರ ಅಂಗಡಿಯಿಂದ ಖರೀದಿಸಿ ಕೊಟ್ಟರೆ ನಾವು ಹೋದ ಮೇಲೆ ಮತ್ತೆ ಅದನ್ನು ಅಂಗಡಿಗೆ ಮರಳಿಸುತ್ತಾರೆ.ಹೀಗೆ ಸುಮಾರು ನೂರು ಜನ ಹುಡುಗರು ಬೆನ್ನು ಬೀಳುತ್ತಾರೆ."ಅಣ್ಣ ಕಾಸ್ ಕೊಡಿ " ಎನ್ನುವುದು ಅವರ ಟ್ರೇಡ್ ಮಾರ್ಕ್. ಅದನ್ನು ಕಂಡು ನನಗೆ ತೆಲಗು ಪೋಕರಿ ಫಿಲಂ ನ ಭಿಕ್ಷುಕರು ನೆನಪಾಗ್ತಾ ಇದ್ರು.

ಬೆಟ್ಟ ಸುಮಾರು ೫ ಕಿ ಮೀ ಇದ್ದು ಸುತ್ತಲೂ ಹಸಿರು ಬೆಟ್ಟಗಳಿಂದ ಕಂಗೊಳಿಸುತ್ತಿತ್ತು.ನಾವು ಅಲ್ಲಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಹಣ್ಣು ತಿನ್ನುತ್ತಾ ಮುಂದೆ ಹತ್ತಿದೆವು. ಸುಮಾರು ೨ ಗಂಟೆ ಹತ್ತಿದ ಬಳಿಕ ನಾವು ನಾಗಮಲೈ ನ ತುದಿ ತಲುಪಿದೆವು. ಅಲ್ಲಿ ಶಿವನಿಗೆ ನಮಸ್ಕರಿಸಿ ಸ್ವಲ್ಪ ದಣಿವಾರಿಸಿಕೊಂಡು ಕೆಳಗಿಳಿಯಲು ಪ್ರಾರಂಭಿಸಿದೆವು. ೧೧ ಗಂಟೆಯ ಒಳಗೆ ನಾವು ಜೀಪ್ ನ ಬಳಿ ಇದ್ದೆವು. ನಂತರ ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರನ ದರ್ಶನ ಭಾಗ್ಯವನ್ನು ಪಡೆದೆವು.

ಅಲ್ಲಿಂದ ಹೊರಟು ಮಲೆ ಮಹದೇಶ್ವರ ಬೆಟ್ಟದ ಗಿರಿದರ್ಶಿನಿ ಹೋಟೆಲ್ ನಲ್ಲಿ ತಿಂಡಿ ತಿಂದು ಮೈಸೂರ್ ಕಡೆ ಪ್ರಯಾಣ ಬೆಳೆಸಿದೆವು. ದಾರಿ ಮಧ್ಯದಲ್ಲಿ ಸ್ವಲ್ಪ ದೂರ ನಾನೂ ಜೀಪ್ ಚಲಾಯಿಸಿದೆ. ಜೀಪ್ ಓಡಿಸಿದ ಮೊದಲ ಅನುಭವ ಚೆನ್ನಾಗಿತ್ತು[ರಸ್ತೆ ಬದಿಯಲ್ಲಿ ಹೋಗುವವರ ಅದೃಷ್ಟವೂ ಚೆನ್ನಾಗಿತ್ತು]. ಎಲ್ಲಿಯೂ ಯಾರಿಗೂ ಹಾನಿ ಉಂಟು ಮಾಡದೆ ಜೀಪ್ ಚಲಾಯಿಸಿದೆ. ಮತ್ತೆ ಕೊಳ್ಳೆಗಾಲದ ಅನ್ನಪೂರ್ಣ ಹೋಟೆಲ್ ನಲ್ಲಿ ಮಧ್ಯಾಹ್ನದ ಊಟ. ಊಟ ಮುಗಿಸಿ ಹೊರಟ ಗಾಡಿ ನಿಂತಿದ್ದೆ ಮೈಸೂರಿನಲ್ಲಿ. ಸಂಜೆ ೬ ರ ಸುಮಾರಿಗೆ ಮೈಸೂರಿನಲ್ಲಿ ಇದ್ದೆವು. ಸುಬ್ಬು ನಮ್ಮನ್ನು ಬೆಂಗಳೂರಿನ ಬಸ್ ಹತ್ತಿಸಿ ಬೀಳ್ಕೊಟ್ಟ. ನಾನು ಬಸ್ಸು ಹತ್ತಿ ಮುಚ್ಚಿದ ಕಣ್ಣು ಬಿಟ್ಟಿದ್ದೇ ಬೆಂಗಳೂರಿನಲ್ಲಿ.

ಒಂದೆಡೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಸಂತೋಷ ಇದ್ದರೆ , ಇನ್ನೊಂದೆಡೆ ನಾಳೆಯಿಂದ ಮತ್ತದೇ ಕೆಲಸಕ್ಕೆ ಹೋಗಬೇಕಲ್ಲಾ ಎನ್ನೋ ವ್ಯಥೆಯಿಂದ ಎಲ್ಲರೂ ಅವರವರ ಮನೆ ಕಡೆ ಹೆಜ್ಜೆ ಹಾಕಿದೆವು.